ಸಿಂಪಲ್ ಸುನಿ ಅವರ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ಚಿತ್ರಮಂದಿರಗಳಲ್ಲಿ ಎಷ್ಟು ಯಶಸ್ಸು ಕಂಡಿತ್ತೋ, ಅದರಲ್ಲಿ ನಟಿಸಿದ್ದ ಕಲಾವಿದರೂ ಕೂಡ ಅಷ್ಟೇ ಯಶಸ್ಸು ಕಂಡಿದ್ದಾರೆ. ಚಿತ್ರದ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ರಿಷಿ ಅವರು ಅದಾದ ನಂತರ ‘ಕವಲುದಾರಿ’, ‘ಸಾರ್ವಜನಿಕರಿಗೆ ಸುವರ್ಣವಕಾಶ’ ಸೇರಿದಂತೆ ಹಲವು ಚಿತ್ರಗಳನ್ನು ಪಡೆದರು. ಇದೀಗ ಇವರ ಮುಂದಿನ ಸಿನಿಮಾ ಬಿಡುಗಡೆಯಾಗಿದ್ದು, ಈ ಬಗ್ಗೆ ಹೊಸ ಸುದ್ದಿಯನ್ನು ಅವರು ಹೊರಹಾಕಿದ್ದಾರೆ.

ಜೂನ್ 21ರಂದು ರಿಷಿ ಜನುಮದಿನ. ಇದೇ ಕಾರಣದಿಂದ ಇವರ ಮುಂದಿನ ಸಿನಿಮಾವಾದ ‘ನೋಡಿ ಸ್ವಾಮಿ ಇವನು ಇರೋದೇ ಹೀಗೆ’ ಚಿತ್ರತಂಡ ಚಿತ್ರದ ಬಿಡುಗಡೆಯ ಬಗೆಗಿನ ಮಹತ್ವದ ನಿರ್ಧಾರ ಹೊರಹಾಕಿದ್ದಾರೆ. ಇಸ್ಲಾಹುದ್ದಿನ್ ಎನ್ ಎಸ್ ಅವರು ರಚಿಸಿ ನಿರ್ದೇಶಿಸಿರುವ ಈ ಚಿತ್ರ ನೇರವಾಗಿ ಒಟಿಟಿಯಲ್ಲೇ ಬಿಡುಗಡೆಯಾಗಲಿದೆ. ‘ಜೀ5’ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ತನ್ನದಾಗಿಸಿಕೊಂಡಿದೆ. ಹಾಗಾಗಿ ಸಿನಿಮಾ ನೇರವಾಗಿ ಜೀ5 ನಲ್ಲಿ ಪ್ರದರ್ಶನ ಕಾಣಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಬಿಡುಗಡೆಯ ದಿನಾಂಕ ಇನ್ನು ಹೊರಬಿದ್ದಿಲ್ಲ.

ಮಾನಸಿಕ ಒತ್ತಡಕ್ಕೆ ಒಳಗಾಗೋ ಯುವಕ ಸಾಯಿ ಕುಮಾರ್ ಕಥೆಯಗಿರೋ ಈ ‘ನೋಡಿ ಸ್ವಾಮಿ ಇವನು ಇರೋದೇ ಹೀಗೆ’ ಸಿನಿಮಾದಲ್ಲಿ ರಿಷಿ ನಾಯಕನಾಗಿ ಬಣ್ಣ ಹಚ್ಚಿದ್ದರೆ, ಧನ್ಯ ಬಾಲಕೃಷ್ಣ, ಅಪೂರ್ವ ಭಾರದ್ವಜ್, ಗ್ರೀಷ್ಮ ಶ್ರೀಧರ್, ನಾಗಭೂಷಣ ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮ್ರೇಜ್ ಸೂರ್ಯವಂಷಿ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ.

Share via
Copy link
Powered by Social Snap