ತುಳು ರಂಗಭೂಮಿಯ ಖ್ಯಾತ ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಯ 40ನೇ ಘಟಿಕೋತ್ಸವದಲ್ಲಿ ದೇವದಾಸ್ ಕಾಪಿಕಾಡ್ , ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಪತ್ನಿ ಹೇಮಾವತಿ ಹೆಗ್ಗಡೆ ಹಾಗೂ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ತುಳು ರಂಗಭೂಮಿ ಹಾಗೂ ಸಿನಿಮಾದಲ್ಲಿ ಪ್ರಸಿದ್ಧರಾಗಿರುವ ದೇವದಾಸ್ ಕಾಪಿಕಾಡ್ ಬರಹಗಾರ, ನಿರ್ದೇಶಕ, ಕಥೆಗಾರ , ಗೀತರಚನೆಕಾರ, ಗಾಯಕ, ನಿರ್ಮಾಪಕ , ನಟನಾಗಿ ಗುರುತಿಸಿಕೊಂಡಿದ್ದಾರೆ.

ಕಳೆದ 30 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ದೇವದಾಸ್ ಕಾಪಿಕಾಡ್ ಅವರಿಗೆ “ನಲಗೇ ಬಲೇ ಚಾ ಪರ್ಕ” ನಾಟಕ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿತು. ಈ ನಾಟಕದ ಹೆಸರನ್ನೇ ತಮ್ಮ ನಾಟಕ ತಂಡಕ್ಕೆ ಇಟ್ಟುಕೊಂಡು ಹಲವು ಯಶಸ್ವಿ ನಾಟಕಗಳನ್ನು ಪ್ರದರ್ಶಿಸಿ ಜನಮನ ಗೆದ್ದಿದ್ದಾರೆ.

55 ತುಳು ನಾಟಕಗಳನ್ನು ರಚಿಸಿ ನಿರ್ದೇಶಿಸಿರುವ ದೇವದಾಸ್ ಕಾಪಿಕಾಡ್ ವಿಶ್ವದಾದ್ಯಂತ 8000 ಕ್ಕೂ ಅಧಿಕ ನಾಟಕ ಪ್ರದರ್ಶನ ನೀಡಿದ್ದಾರೆ. ತುಳುನಾಡಿನ ಜನರ ಮೊಗದಲ್ಲಿ ನಗು ಅರಳಿಸಿರುವ ದೇವದಾಸ್ ತುಳು ಚಿತ್ರರಂಗದಲ್ಲಿಯೂ ಛಾಪು ಮೂಡಿಸಿದ್ದಾರೆ. ಬೊಳ್ಳಿ ಮೋವೀಸ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಇವರ ಸಾಧನೆಗೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

Share via
Copy link
Powered by Social Snap